ಬಿಜೆಪಿ ಮಹಿಳಾಮೋರ್ಚಾದ ವತಿಯಿಂದ ರಕ್ಷಾಬಂಧನ, ಓಣಂ ಉಡುಗೊರೆ; ಪೆರಡಾಲ ಕೊರಗ ಉನ್ನತಿಯಲ್ಲಿ ಹಬ್ಬದ ವಾತಾವರಣ


ಬದಿಯಡ್ಕ: ಭಾರತೀಯ ಜನತಾಪಕ್ಷದ ಮಹಿಳಾಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಪೆರಡಾಲ ಕೊರಗ ಉನ್ನತಿಯಲ್ಲಿ ಶನಿವಾರ ರಕ್ಷಾಬಂಧನವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಉನ್ನತಿಯ ಸದಸ್ಯರಿಗೆ ಓಣಂ ಹಬ್ಬದ ಉಡುಗೊರೆಯನ್ನು ನೀಡಲಾಯಿತು. ಮಹಿಳಾಮೋರ್ಚಾ ಜಿಲ್ಲಾ ಅಧ್ಯಕ್ಷೆ ರಮಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಬಡಜನರೊಂದಿಗೆ ಸದಾ ಬೆರೆಯಬೇಕೆನ್ನುವ ನರೇಂದ್ರ ಮೋದಿಯವರ ಆಶಯಗಳನ್ನು ಈಡೇರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಡವರ, ಶೋಷಿತರ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಮುಖದಲ್ಲಿ ನಗೆ ಅರಳಿಸುವುದೇ ಭಾರತೀಯ ಜನತಾ ಪಾರ್ಟಿಯ ಮುಖ್ಯ ಧೇಯ್ಯವಾಗಿದೆ ಎಂದು ಅವರು ಹೇಳಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ಬದಿಯಡ್ಕ ಗ್ರಾಮ ಪಂಚಯತುಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಗ್ರಾಮಪಂಚಾಯಿತಿ ಸದಸ್ಯ ಶ್ಯಾಮಪ್ರಸಾದ ಸರಳಿ, ಬಿಜೆಪಿ ಬದಿಯಡ್ಕ ಪಂಚಾಯತು ಸಮಿತಿ ಅಧ್ಯಕ್ಷ ಉದನೇಶ್ವರ ಬದಿಯಡ್ಕ, ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅನಿತಾನಾಯಕ್, ಕಾರ್ಯಕರ್ತ ಸಾಯಿ ಪ್ರಣವ್ ಪಾಲ್ಗೊಂಡಿದ್ದರು. ಬಿಜೆಪಿ ಮಹಿಳಾ ಮೋರ್ಚಾ ಕುಂಬಳೆ ಮಂಡಲ ಅಧ್ಯಕ್ಷೆ ಸುಧಾ ಗಣೇಶ್ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಪ್ರೇಮಲತಾ ವಂದಿಸಿದರು. ಓಣಂ ಹಬ್ಬದ ಪ್ರಯುಕ್ತ ಉನ್ನತಿಯ ಎಲ್ಲಾ ಕುಟುಂಬಗಳಿಗೆ ಸಿಹಿ ತಿಂಡಿ ಹಾಗೂ ಹಿರಿಯರಿಗೆ ಅಶಕ್ತರಿಗೆ ಹೊಸ ವಸ್ತ್ರಗಳನ್ನು ಹಂಚಿ, ಹಬ್ಬದ ಶುಭಾಶಯ ಕೋರಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು