ಕುಂಬಳೆ: ಕೇರಳ ಸರಕಾರವು ಮಹಿಳೆಯರಿಗೆ ಸರಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದು, ಆದರೆ ಇದರಿಂದ ಕಾಸರಗೋಡು ಜಿಲ್ಲೆಯ ಜನರು ವಂಚಿತವಾಗಳು ಸಾಧ್ಯತೆ ಇದೆ.
ಅಂತಾರಾಜ್ಯ ಪ್ರಯಾಣದ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲದಿರುವುದು ಇದಕ್ಕೆ ಕಾರಣ. ಆದ್ದರಿಂದ ಕಾಸರಗೋಡು ಜಿಲ್ಲೆ ಭಾಗದ ಜನರಿಗೆ ಅನುಕೂಲ ಆಗುವಂತೆ, ಅವರು ಹೆಚ್ಚು ಬಳಸುವ ಕಾಸರಗೋಡು - ಮಂಗಳೂರು ನಡುವಿನ ಬಸ್ಗಳಲ್ಲಿ ಕನಿಷ್ಠ ಗಡಿಭಾಗದ ವರೆಗಾದರೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ ಆಗ್ರಹಿಸಿದ್ದಾರೆ.
ಜತೆಗೆ ಬದಿಯಡ್ಕ, ಪೆರ್ಲ ಭಾಗದ ಜನರಿಗೆ ಅನುಕೂಲ ಆಗುವಂತೆ ಕಾಸರಗೋಡು - ಪುತ್ತೂರು ನಡುವೆ ಸಂಚರಿಸುವ ಮತ್ತು ಕಾಸರಗೋಡು - ಸುಳ್ಯ ನಡುವೆ ಸಂಚರಿಸುವ ಭಾಗದಲ್ಲೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಎಲ್ಲದಕ್ಕೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಆಶ್ರಯಸುವ ಈ ಭಾಗದ ಜನರಿಗೆ ಅಂತಾರಾಜ್ಯ ಬಸ್ಗಳಲ್ಲದೆ ಬೇರೆ ಸರಕಾರಿ ಬಸ್ ಸೇವೆ ಇಲ್ಲ. ಆದ್ದರಿಂದ ಸರಕಾರದ ಉಚಿತ ಪ್ರಯಾಣ ಯೋಜನೆಯಲ್ಲಿ ಕಾಸರಗೋಡು ಜಿಲ್ಲೆಯ ಜನರನ್ನು ಪರೋಕ್ಷವಾಗಿ ಹೊರಗಿಡುವುದು ಸರಿಯಲ್ಲ. ಆದ್ದರಿಂದ ಈ ಭಾಗದ ಜನರಿಗೆ ಕನಿಷ್ಠಪಕ್ಷ ಗಡಿಭಾಗದ ವರೆಗಾದರೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು.
ಪುತ್ತೂರಿನಿಂದ ಮಂಜೇಶ್ವರ, ಉಪ್ಪಳ ಭಾಗಕ್ಕೆ ಬರುವ ಕರ್ನಾಟಕದ ಸರಕಾರಿ ಬಸ್ಗಳಲ್ಲಿ ಕರ್ನಾಟಕದ ಗಡಿವರೆಗೆ ಉಚಿತ ಪ್ರಯಾಣದ ಅವಕಾಶ ನೀಡುತ್ತಿದ್ದು, ಅದೇ ರೀತಿ ಕೇರಳದ ಬಸ್ಗಳಲ್ಲೂ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
Tags
ಕುಂಬಳೆ
