ಬದಿಯಡ್ಕ: ಮಾರ್ಪನಡ್ಕದಲ್ಲಿ ಬ್ಯಾಂಕ್ ಕಾವಲುಗಾರ ಸುರೇಶ್ ಬಿ.ಕೆ.ರನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಇಬ್ಬರು ಆರೋಪಗಳನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕುಂಬ್ಡಾಜೆ ಮೈಲುತೊಟ್ಟಿ ಬಳಿಯ ಕಿರಣ್(30), ಕರುವಳತ್ತಡ್ಕ ನಿವಾಸಿ ಅಖಿಲೇಶ್(25) ಬಂಧಿತರು. ಕಾಸರಗೋಡು ಎ.ಎಸ್.ಪಿ.ಅಚ್ಚುತ ಅಶೋಕ್, ಬದಿಯಡ್ಕ ಇನ್ಸ್ಪೆಕ್ಟರ್ ಅನೂಪ್ ಕೃಷ್ಣ ಎಂಬಿವರ ನೇತೃತ್ವದ ತನಿಖಾ ತಂಡ ಪುತ್ತೂರಿನಿಂದ ಆರೋಪಗಳನ್ನು ಬಂಧಿಸಿದೆ. ಇತರ ಅಧಿಕಾರಿಗಳಾದ ರೂಪೇಶ್, ಸುಕುಮಾರನ್, ಪ್ರಸಾದ್, ಸಜೀವನ್, ಗೋಕುಲ್, ಅನೀಶ್,ಶ್ರೀನೇಶ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಘಟನೆ ನಡೆದು 24 ಗಂಟೆಗಳ ಮೊದಲೇ ಆರೋಪಗಳನ್ನು ಬಂಧಿಸಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿದೆ.
ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಮಾರ್ಪನಡ್ಕ ಶಾಖೆಯ ಕಾವಲುಗಾರನಾಗಿದ್ದ ಬಿದ್ರುಕೂಡ್ಲು ನಿವಾಸಿ ಸುರೇಶ್ ಬಿ.ಕೆ (45) ಅವರನ್ನು ನಿನ್ನೆ (ಆದಿತ್ಯವಾರ) ರಾತ್ರಿ ಕಿರಣ್ ಹಾಗೂ ಅಖಿಲೇಶ್ ಸೇರಿ ಮಾರಕಾಯುಧಗಳಿಂದ ಇರಿದಿದ್ದರು. ಗಂಭೀರ ಗಾಯಗೊಂಡ ಸುರೇಶ್ ರನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಈ ಬಗ್ಗೆ ಕೇಸು ದಾಖಲಿಸಿದ ಬದಿಯಡ್ಕ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
Tags
ಬದಿಯಡ್ಕ
