‘ಕರಾಡವಾಣಿ’ ಪತ್ರಿಕೆಯ ರಜತ ಮಹೋತ್ಸವದ ಅಂಗವಾಗಿ, ಪತ್ರಿಕೆಯ ಸಂರಕ್ಷಕರು, ಚಂದಾದಾರರು ಹಾಗೂ ಜಾಹಿರಾತುದಾರರ ಬೃಹತ್ ಸಮಾವೇಶವು ಬರುವ ಸೆಪ್ಟೆಂಬರ್ 6 ರಂದು ಪೆರ್ಲದ ಭಾರತಿ ಸದನದಲ್ಲಿ ನಡೆಯಲಿದೆ. ಬೆಳಗ್ಗೆ 9:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಈ ಸಂಭ್ರಮವು ಜರುಗಲಿದ್ದು, ಉದ್ಘಾಟನಾ ಕಾರ್ಯಕ್ರಮ ಬೆಳಗ್ಗೆ 10:00 ಗಂಟೆಗೆ ಆರಂಭಗೊಳ್ಳಲಿದೆ.'ಉದಯವಾಣಿ' ದಿನಪತ್ರಿಕೆಯ ನಿವೃತ್ತ ಉಪಸಂಪಾದಕರಾದ ನಿತ್ಯಾನಂದ ಸಜಂಗದ್ದೆ ಸಮಾವೇಶ ಉದ್ಘಾಟಿಸಿ, ಸಂವಾದ ನಡೆಸುವರು .ಪತ್ರಿಕೆಯು ಕಳೆದ 25 ವರ್ಷಗಳಲ್ಲಿ ಬೆಳೆದುಬಂದ ಹಾದಿಯ ಕುರಿತು ಕರಾಡವಾಣಿ ಸಂಪಾದಕ ಮಂಡಳಿಯಿಂದ 'ಕರಾಡವಾಣಿ ಕಥಾ ಕಥನ' ಕಾರ್ಯಕ್ರಮ ಮೂಡಿಬರಲಿದೆ. ಮಧ್ಯಾಹ್ನದ ಭೋಜನದ ಬಳಿಕ, ಕರಾಡವಾಣಿಯ ಸಂಪಾದಕ ಮಂಡಳಿಯವರೊಂದಿಗೆ ಓದುಗರು ಹಾಗೂ ಸದಸ್ಯರ ಮುಕ್ತ ವಿಚಾರ ವಿನಿಮಯ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಕರಾಡವಾಣಿಯ ಕಳೆದ 25 ವರ್ಷಗಳ ಇತಿಹಾಸದಲ್ಲಿ ಪ್ರಕಟವಾದ ಅತ್ಯಂತ ಹಳೆಯ ಸಂಚಿಕೆಯನ್ನು ಆರಿಸಿ ಸಮಾವೇಶಕ್ಕೆ ತರುವ ಸದಸ್ಯರಿಗೆ ವಿಶೇಷ ಸ್ಪರ್ಧೆಯನ್ನೂ ಏರ್ಪಡಿಸಲಾಗಿದೆ.
ಈ ಐತಿಹಾಸಿಕ ರಜತ ಸಂಭ್ರಮದಲ್ಲಿ ಕರಾಡವಾಣಿಯ ಮಹಾ ಸಂರಕ್ಷಕರು, ವಿಶೇಷ ಸಂರಕ್ಷಕರು, ಸಂರಕ್ಷಕರು, ಆಜೀವ ಹಾಗೂ ವಾರ್ಷಿಕ ಚಂದಾದಾರರು, ಪತ್ರಿಕೆಯ ಹಿತೈಷಿ ಜಾಹಿರಾತುದಾರರು ಮತ್ತು ಸಂಪಾದಕ ಮಂಡಳಿಯ ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಅಭೂತಪೂರ್ವ ರೀತಿಯಲ್ಲಿ ಯಶಸ್ವಿಗೊಳಿಸಬೇಕಾಗಿ ಸಮಾವೇಶದ ಸಂಯೋಜಕರಾದ ಎಸ್. ಎನ್. ಭಟ್, ಸೈಪಂಗಲ್ಲು ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
