ಕೆಲಸಕ್ಕೆಂದು ಮನೆಯಿಂದ ಹೊರಟ ವ್ಯಕ್ತಿಯ ಮೃತದೇಹ ಕಾಡಿನೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಅಡೂರು: ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ವ್ಯಕ್ತಿಯ ಮೃತದೇಹ ಕಾಡಿನೊಳಗೆ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ  ಪತ್ತೆಯಾಗಿದೆ. ಆಡೂರು ಬಳವಂತಡ್ಕ ನಿವಾಸಿಯೂ ಪ್ರಸ್ತುತ ಮಣಿಯೂರಿನಲ್ಲಿ ವಾಸವಾಗಿದ್ದ ಬಿ.ಸಿ. ಚಂದ್ರನ್ (56) ಮೃತಪಟ್ಟ ದುರ್ದೈವಿ. ಇವರು ಕಲ್ಲುಗಾರೆ ಮೇಸ್ತ್ರಿಯಾಗಿದ್ದರು. ನಿನ್ನೆ (ಶುಕ್ರವಾರ) ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆಂದು ಮನೆಯಿಂದ ಹೊರಟಿದ್ದ ಇವರನ್ನು ಆ ಬಳಿಕ ಯಾರೂ ನೋಡಿರಲಿಲ್ಲ ಎನ್ನಲಾಗಿದೆ.

ಸಂಜೆ ಸುಮಾರು ಮೂರೂವರೆ ಗಂಟೆಗೆ ಸೌದೆ ಸಂಗ್ರಹಿಸಲು  ಹೋದವರು ಚಂದ್ರನ್ ಅವರು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡಿದ್ದಾರೆ. ತಕ್ಷಣವೇ ಅವರು ಆದೂರು ಪೊಲೀಸ್ ಮತ್ತು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಣಿಯೂರು ನಿವಾಸಿ ರತನ್ ಕುಮಾರ್ ನಾಯ್ಕ್ ನೀಡಿದ ದೂರಿನ ಮೇರೆಗೆ ಆದೂರು ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ಚಂದ್ರನ್ ಅವರು ಬಳವಂತಡ್ಕದ ದಿವಂಗತ ಚೆನಿಯ ನಾಯ್ಕ್ - ಲಕ್ಷ್ಮಿ ದಂಪತಿಯ ಪುತ್ರರಾಗಿದ್ದಾರೆ. ಮೃತರು ಪತ್ನಿ ಭವಾನಿ,ಮಕ್ಕಳಾದ ಸಂಧ್ಯಾ, ಅರುಣ್, ಸತೀಶನ್, ರೋಹಿತ್, ಸರಿತ್ ಎಂಬಿವರನ್ನು ಅಗಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು