ಕಣ್ಣೂರು: ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೃಹತ್ ಪ್ರಮಾಣದ ಚಿನ್ನದ ಬೇಟೆ ನಡೆದಿದೆ. ಮಲದ್ವಾರದಲ್ಲಿ ಅಡಗಿಸಿ ಸಾಗಿಸುತ್ತಿದ್ದ 1,281 ಗ್ರಾಂ ಚಿನ್ನದೊಂದಿಗೆ ಕುಂಬಳೆ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತನನ್ನು ಅಬ್ದುಲ್ ರಶೀದ್ ಎಂದು ಗುರುತಿಸಲಾಗಿದೆ.
ವಶಪಡಿಸಿಕೊಳ್ಳಲಾದ ಚಿನ್ನದ ಮೌಲ್ಯ ಸುಮಾರು 1 ಕೋಟಿ 66 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈತ ಶಾರ್ಜಾದಿಂದ ಬಂದ ವಿಮಾನದ ಪ್ರಯಾಣಿಕನಾಗಿದ್ದನು. ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕ ರಹಸ್ಯ ಮಾಹಿತಿಯ ಮೇರೆಗೆ ನಡೆಸಿದ ತಪಾಸಣೆಯಲ್ಲಿ ಈ ಚಿನ್ನ ಪತ್ತೆಯಾಗಿದೆ. ಯುವಕನ ನಡಿಗೆಯಲ್ಲಿದ್ದ ಅಸ್ವಾಭಾವಿಕತೆಯೂ ಅಧಿಕಾರಿಗಳ ಸಂಶಯಕ್ಕೆ ಕಾರಣವಾಗಿತ್ತು.
ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೂ, ಆತ ಮಲದ್ವಾರದಲ್ಲಿ ಚಿನ್ನ ಅಡಗಿಸಿಟ್ಟಿರುವುದನ್ನು ಒಪ್ಪಿಕೊಳ್ಳಲಿಲ್ಲ. ತದನಂತರ ನಡೆಸಿದ ಎಕ್ಸರೆ ತಪಾಸಣೆಯಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ. ಚಿನ್ನದ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಹೊರಬರಬೇಕಿದೆ.
Tags
ಕಣ್ಣೂರು
