ಸೀತಾಂಗೋಳಿ : ಭಾರತದ ನಾಗಸಾಧುಗಳ ಪಂಥ (ಅಖಾಡ) ಗಳಲ್ಲಿ ಅತ್ಯಂತ ಪ್ರಾಚೀನ ಹಾಗೂ 13 ಪಂಥಗಳಲ್ಲಿಯೇ ಅತ್ಯಂತ ಪ್ರಬಲ ಹಾಗೂ ಮೊದಲ ಪಂಥವಾದ "ಜೂನಾ ಪಂಥದ" ಮಹಾ ಮಂಡಲೇಶ್ವರ ಶ್ರೀ ಆನಂದವನ ಭಾರತಿ ಸ್ವಾಮೀಜಿಯವರು ಇದೇ ಬರುವ ಮಾ.8 ರಂದು ಪಂಚವರ್ಣದ ಪುಂಚದ ಮಣ್ಣ್ ಎಂಬ ಖ್ಯಾತಿಯನ್ನು ಹೊಂದಿದ ತುಳುನಾಡಿನ ಪುತ್ತಿಗೆಗೆ ಆಗಮಿಸಲಿದ್ದಾರೆ.
ಸುಮಾರು 271 ವರ್ಷಗಳ ಹಿಂದೆ ಬ್ರಿಟಿಷರು ನಿಲುಗಡೆಗೊಳಿಸಿದ ಮಲಪ್ಪುರಂನ ಭಾರತಹೊಳೆಯ ತೀರದಲ್ಲಿ ತಿರುನಾವಾಯ ಎಂಬಲ್ಲಿನ ಶ್ರೀ ಮುಕುಂದೇಶ್ವರ ದೇವಾಲಯದಲ್ಲಿ "ಮಹಾಮಾಮಾಂಕಂ' ಅಥವಾ ಕೇರಳದ ಕುಂಭಮೇಳನ್ನು ಮರು ಆರಂಭಿಸಿದ ಧೀರ ಸ್ವಾಮೀಜಿ ಎನ್ನುವ ಗೌರವವನ್ನು ಹೊಂದಿರುವ ಸ್ವಾಮೀಜಿಯವರದು ಇದು ಮೊದಲ ಸಾರ್ವಜನಿಕ ಸಮಾರಂಭವಾಗಿದೆ. ಅವರು ಪುತ್ತಿಗೆಯಲ್ಲಿ ಜರಗಲಿರುವ "ವಿರಾಟ್ ಹಿಂದು ಸಂಗಮ" ದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಲಿರುವರು.
ಶ್ರೀಗಳ ಪೂರ್ವಾಶ್ರಮ ಹಿನ್ನಲೆ
ಶ್ರೀ ಆದಿಶಂಕರಾಚಾರ್ಯರ ಕಟ್ಟಾ ಅನುಯಾಯಿ ಆಗಿರುವ ಶ್ರೀಗಳು ಪೂರ್ವಾಶ್ರಮದಲ್ಲಿ ಕೇರಳದ ತೃಶೂರಿನ ಚಾಲಕ್ಕುಡಿಯ ಮೇನೋಕಿ ವೀಟ್ಟಿಲ್ ಸೇತುಮಾಧವನ್-ಆನಂದವಲ್ಲಿ ದಂಪತಿಯ ಕುವರರಾಗಿದ್ದಾರೆ. ಪಿ. ಸಲೀಲ್ ಇವರ ಪೂರ್ವನಾಮ. ಇರಿಞಾಲಕುಡ ಕ್ರೈಸ್ಟ್ ಕಾಲೇಜು, ತೃಶೂರು ಕೇರಳ ವರ್ಮ ಕಾಲೇಜಿಗಳಲ್ಲಿ ಶಿಕ್ಷಣ ಪಡೆದ ಆವರು ಎಢಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಎಸ್.ಎಫ್.ಐ.ಯ ಪ್ರಮುಖ ನೇತಾರನಾಗಿದ್ದರು. ಎಸ್.ಎಫ್.ಐ ತ್ರಿಶೂರು ಜಿಲ್ಲಾ ಉಪಾಧ್ಯಕ್ಷ, ಕಾಲೇಜ್ ಯೂನಿಟ್ ನ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದವರು. ಕಟ್ಟಾ ನಾಸ್ತಿಕರಾಗಿದ್ದ ಇವರು ಓರ್ವ ಪತ್ರಕರ್ತನಾಗಬೇಕೆಂಬ ಹಂಬಲದಿಂದ ಕೊಚ್ಚಿಯ ಮೀಡಿಯಾ ಅಕಾಡೆಮಿಯಲ್ಲಿ ಜರ್ನಲಿಸಂ ಪೂರ್ಣಗೊಳಿಸಿದ್ದರು. ಬಳಿಕ ಹತ್ತು ವರ್ಷಗಳ ಕಾಲ ಪತ್ರಕರ್ತನಾಗಿ ಲೇಖನಿ ಹಿಡಿದಿದ್ದರು. "ನಿಙಲೆನ್ನೆ ಕಮ್ಯೂನಿಸ್ಟಾಕಿ " ನಾಟಕದ ಪ್ರಧಾನ ಆಯೋಜಕರಾಗಿದ್ದರು.
ಮಾರ್ಕ್ಸ್ ಸಿಂದನಿಂದ ಮಹರ್ಷಿಯತ್ತ....!!!
ಆಸ್ತಿಕತೆಯನ್ನು ವಿರೋಧಿಸಿ ದೈವ ದೇವರುಗಳೆನ್ನೋದು ಶುದ್ಧ ಮೂಢತನ ಎಂದು ಉರಿ ಭಾಷಣ ಮಾಡುತ್ತಾ ಕಾಮ್ರೇಡಾಗಿ ಗುರುತಿಸಿಕೊಂಡಿದ್ದ ಪಿ.ಸಲೀಲ್ ಅವರ ಬದುಕಲ್ಲಿ ಉಂಟಾದ ಆಕಸ್ಮಿಕ ತಿರುವೊಂದು ಅವರ ಬದುಕಿನ ಚಿತ್ರಣವನ್ನೇ ಬದಲಿಸಿ ಬಿಟ್ಟಿತು.!
ದೃಶ್ಯ ಮಾಧ್ಯಮದಲ್ಲಿ ದುಡಿಯುತ್ತಿದ್ದ ಅವರು 2019ರಲ್ಲಿ ಅಲಹಾಬಾದ್ ನಲ್ಲಿ ನಡೆದ ಕುಂಭಮೇಳವನ್ನು ನೇರ ಪ್ರಸಾರ ಮಾಡಲು ಹೋಗಿದ್ದರು. ಅದೇನಾಯ್ತೋ ಗೊತ್ತಿಲ್ಲ. ಅಲ್ಲಿ ಅವರು ಭೇಟಿಯಾದ ನಾಗ ಸಾಧುರೋರ್ವರ ಪ್ರಭಾವಕ್ಕೆ ಒಳಗಾದ ಸಲೀಲ್ ಅವರು ಜೂನಾ ಪಂಥದ ನಾಗ ಸನ್ಯಾಸಿಯಿಂದ ನಾಗದೀಕ್ಷೆಯನ್ನು ಪಡೆದುಕೊಂಡು ತಪ ಜಪದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡು ಶ್ರೀ ಆನಂದವನ ಭಾರತಿ ಸ್ವಾಮೀಜಿಯಾದರು. ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭಮೇಳದಲ್ಲಿ ಶ್ರೀ ಮಹಂತ್ ಪ್ರೇಮಗಿರಿ ಅವರ ನೇತೃತ್ವದಲ್ಲಿ ಶ್ರೀ ಆನಂದವನ ಭಾರತಿ ಸ್ವಾಮೀಜಿ ಅವರನ್ನು ಮಹಾಮಂಡಲೇಶ್ವರರನ್ನಾಗಿ ಜೂನಾ ಪೀಠಾಧಿಪತಿ ಅವಧೋಶಾನಂದ ಗಿರಿ ಅಭಿಷೇಕ ಮಾಡಿದ್ದರು.

